ವಿಜ್ಞಾನವನ್ನು ಅಥವಾ ಯಾವುದೇ ಜ್ಞಾನ ಶಾಖೆಯ ವಿಷಯಗಳನ್ನು ಆಯಾ ಕ್ಷೇತ್ರದ ಪರಿಣಿತರೇ ಬರೆದರೆ ಅದರ ಮೌಲ್ಯ ಹೆಚ್ಚು. ಅದಕ್ಕೆ ಕೆಲವು ಕಾರಣಗಳಿವೆ
೧) ಪ್ರತಿಯೊಂದು ಕ್ಷೇತ್ರದಲ್ಲಿಯೂ ಅದರದ್ದೇ ಆದ ಒಳನೋಟಗಳು, ನೈಪುಣ್ಯಗಳು, ಹಾಗೂ ಕೇವಲ ಮಾಹಿತಿ-ಮಾತ್ರದಿಂದ ಹಿಡಿದಿಡಲಾರದ ಅನೇಕ ವಿಷಯಗಳು ಇರುತ್ತವೆ. ಇದು ಪರಿಣಿತರಿಗೆ ಮಾತ್ರ ಸಹಜ ಸಾಧ್ಯ. ಉದಾಹರಣೆಗೆ, ಬೆಳಕು ಸರಳ ರೇಖೆಯಲ್ಲಿ ಚಲಿಸುತ್ತದೆ ಎನ್ನುವುದು ಪುಸ್ತಕದ ‘ಬದನೇಕಾಯಿ’ , ಬೆಳಕು ವಸ್ತುಗಳ ಅಂಚಿಗೆ ಬಾಗುವುದು (diffraction) ಹಾಗೂ ಗಾಶಿಯನ್ (Gaussian) ಪ್ರೊಫೈಲ್ ನಲ್ಲಿರುವ ಲೇಸರ್ ಬೆಳಕು ಹಿಗ್ಗುತ್ತಾ, ಕುಗ್ಗುತ್ತಾ ಸಾಗುತ್ತದೆ ಎನ್ನುವುದನ್ನು ಅನುಭವದಿಂದ ಕಂಡುಕೊಳ್ಳಬೇಕು.
೨) ಪ್ರಕೃತಿಯನ್ನು ಅರ್ಥಮಾಡಿಕೊಳ್ಳಲು ವಿಜ್ಞಾನದಲ್ಲಿ ಅನೇಕ assumption ಗಳನ್ನು ಮಾಡುವುದು ಅನಿವಾರ್ಯ. ಅಂತಹ assumption ಅಥವಾ ಊಹೆಗಳಿಗೆ ತಕ್ಕಂತೆ ಗ್ರಹಿಕೆ ಸಾಗುತ್ತದೆ. ಗ್ರಹಿಕೆಗೂ ಯಥಾರ್ಥಕ್ಕೂ ನಡುವಿನ ವ್ಯತ್ಯಾಸಗಳನ್ನು ಅರಿತುಕೊಳ್ಳಲು ಒಂದು ಮಟ್ಟಿನ ಪರಿಣಿತಿಯಾದರೂ ಬೇಕಾಗುತ್ತದೆ.
೩) ನೀವು ಸಮುದ್ರದ ಬಗೆಗೆ ತಿಳಿದುಕೊಳ್ಳಬೇಕು ಎಂದುಕೊಳ್ಳಿ, ಅಂತಹ ಸಮುದ್ರದ ತೀರಕ್ಕೆ ಯಾವುದೊ ಬಸ್ಸಿನ ಡ್ರೈವರ್, ಅಥವಾ ಟೂರಿಸ್ಟ್ ಗೈಡ್ ನಿಮ್ಮನ್ನು ಅಲ್ಲಿ ಕರೆದೊಯ್ಯಬಲ್ಲ. ಮತ್ತೋರ್ವ ನಿಮ್ಮನ್ನು ನಯನಮನೋಹರವಾದ ಸಮುದ್ರ ತೀರವನ್ನು ತೋರಿಸಬಲ್ಲ. ನಿಮ್ಮ ಫೋನ್ ಕ್ಯಾಮರಾದಲ್ಲಿ ಸಮುದ್ರತೀರದ ಸೌಂದರ್ಯವನ್ನು, ಸೂರ್ಯಾಸ್ತವನ್ನು ಸೆರೆಹಿಡಿಯಬಹುದು, ಆದರೆ ಕೊನೆಗೆ ನಿಮಗೆ ಸಮುದ್ರದ ಕುರಿತಾದ ಆತ್ಯಂತಿಕ ಪರಿಚಯ ಆಗಬೇಕೆಂದರೆ ಸಮುದ್ರದಾಳವನ್ನು ಹೊಕ್ಕು ಬಂದವನೇ ಬೇಕು. ಉಳಿದೆಲ್ಲರೂ ನಿಮ್ಮನ್ನು ತೀರಕ್ಕೆ ಕರೆದೊಯ್ಯಬಲ್ಲರು, ಅಷ್ಟೇ! ಸಮುದ್ರದ ಆಳ, ಅಗಲ, ಆಗಾಧತೆ, ಭೀಕರತೆ, ಬೆಳಕು ಸಹಿತ ಹೋಗಲಾರದ ನಿಗೂಢ ಅಧೋಲೋಕದ ಅರಿವು ಆಗಬೇಕೆಂದರೆ ಆ ಕುರಿತು ತಿಳಿದವನೇ ಬೇಕು. ಅಲ್ಲವೇ?
೪) ಪರಿಣಿತರಿಂದ ಬರೆಸಬೇಕೆಂಬ ಪ್ರಯತ್ನ ಫಲ ನೀಡಲಿಲ್ಲ ಎಂದು ಓರ್ವ ಹಿರಿಯರು (ನನ್ನ ಹಿಂದಿನ ಪೋಸ್ಟ್ ನೋಡಿ) ಹೇಳಿದರು. ವಿಜ್ಞಾನಕ್ಕೆ ತನ್ನದೇ ಆದ ‘ರಸ’ ಇದೆ. ಅದಕ್ಕೆ ಹೊರಗಿನಿಂದ ಹುಸಿಯಾಗಿ , ರಮ್ಯತೆಯನ್ನು ಹೆಚ್ಚಿಸಲು, ಉತ್ಪ್ರೇಕ್ಷೆ ಗೊಳಿಸುವಂತಹ, ಜನಪ್ರಿಯತೆಯ ವ್ಯಸನಕ್ಕೆ ಬಿದ್ದು ವೈಜ್ಞಾನಿಕ ಮನೋಧರ್ಮಕ್ಕೆ ಹಾಗೂ ನಿಖರತೆಗೆ ಮಾರಕವಾಗುವ ಬರಹಗಳು ಅನಗತ್ಯ. ಈ ಕುರಿತಾದ ಹೆಚ್ಚಿನ ವಿವರಣೆ ಈ ಬರಹದಲ್ಲಿದೆ, ಆಸಕ್ತರು ಗಮನಿಸಿ.
೫) ‘ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ’ ದ ಪ್ರಸಿದ್ಧ ‘ವಿಜ್ಞಾನ’ ಅಂಕಣಕಾರ ರೊಬ್ಬರ ಕುರಿತು, ಹತ್ತಾರು ಪುಸ್ತಕಗಳನ್ನು ಬರೆದ, ನೂರಕ್ಕೂ ಹೆಚ್ಚು ವೈಜ್ಞಾನಿಕ ಲೇಖನಗಳನ್ನು ಪೀರ್ reviewed ಜರ್ನಲ್ ಗಳಲ್ಲಿ ಪ್ರಕಟಿಸಿದ ಭಾರತದ ಹಿರಿಯ ವಿಜ್ಞಾನಿಯೋರ್ವರು ಹೇಳಿದ ಮಾತು – ‘ನಾನು ಎರಡು ಭಾರಿ ಅವರಿಗೆ ಫೋನ್ ಮಾಡಿ , ನೀವು ಬರೆದ ಕೆಲವೊಂದು ವಿಷಯಗಳು ಸರಿಯಲ್ಲ, ನಿಖರತೆಯ ಕೊರತೆಯಿದೆ, ಹಾಗೂ ಎಲ್ಲೆಲ್ಲಿ ತಪ್ಪಿದೆ ಎಂದು ವಿವರಿಸಿದೆ, ಇದು ತಪ್ಪು’ ಎಂದು ಹೇಳಿದೆ. ಫೋನಿನಲ್ಲಿ ಸರಿ ಸರಿ ತಿದ್ದಿಕೊಳ್ಳುವೆ ಎಂದು ಹೇಳಿದ ಮಹಾತ್ಮರು ಮತ್ತೆ ತಮ್ಮ ‘ಅಂಕಣ ಕೋರತೆ’ ಯನ್ನು ಮುಂದುವರೆಸಿದರು! – ಎಂದರು. ಎಂತಹ ದುಃಸ್ಥಿತಿ ನೋಡಿ! ಈ ಕುರಿತು ಅಥೆಂಟಿಕ್ ಆಗಿ ಮಾತಾಡಬೇಕಾದವರು ಮೌನವಾಗಿದ್ದಾರೆ, ಅಂಕಣ ಕೊರೆತ ಮುಂದುವರೆದಿದೆ! ಮಾತ್ರವಲ್ಲ, ನಡುನಡುವೆ ರಾಜಕೀಯ ಬೆರೆತು ಒಂದುಬಗೆಯ ‘ವಿಜ್ನಾಕೀಯ ‘ ವಾಗಿದೆ!
೬) “ಪರಿಣಿತಿ, ನೈಪುಣ್ಯ ಹಾಗೂ ನೇರವಾದ ವೈಜ್ಞಾನಿಕ ಅನುಭವವಿಲ್ಲದಿದ್ದರೂ ಇಂತಹ ಬರಹಗಾರರು ಸಮಾಜದಲ್ಲಿ ಒಂದು ಮಟ್ಟಿಗೆ ವೈಜ್ಞಾನಿಕ ಮನೋಧರ್ಮವನ್ನು ಜಾಗೃತವಾಗಿಡುತ್ತಾರೆ, ಆ ಕಾರಣದಿಂದ ಇವರು ಬರೆಯುವುದು ತಪ್ಪಲ್ಲ’ ಎಂದು ಅದೇ ಹಿರಿಯ ವಿಜ್ಞಾನಿಗಳು ಮಾತಾಡುತ್ತಾ ಹೇಳಿದರು. ಅದು ಸರಿ, ಆದರೆ ಸೊಡರು ಸೂರ್ಯನನ್ನು ಮರೆಮಾಚದಿದ್ದರೆ ಒಳ್ಳೆಯದು.
೭) ಸಂಶೋಧನೆಯ ಹಿನ್ನೆಲೆ ಹಾಗೂ ಅಧ್ಯಯನ ಇವೆರಡು ಇಲ್ಲದಿದ್ದರೆ ವಿಜ್ಞಾನದ ಬೆಳವಣಿಗೆ, ಗತಿ, ಮಿತಿ, ವಸ್ತುನಿಷ್ಠತೆಗಳ ಅವಗಾಹನೆ ಇಲ್ಲದೆ ಬರೆದ ಅತಿರಂಜಿತ ಬರಹಗಳು, ಅಥವಾ ಮೂಲ ಸಂಶೋಧನೆಗಳನ್ನು ತಿಳಿದುಕೊಳ್ಳದೆ ಗೂಗಲ್ ಅನುವಾದಿತ ಬರಹಗಳು ಅನೇಕ ತಲೆಮಾರುಗಳ ಓದುಗರನ್ನು ದಾರಿತಪ್ಪಿಸಬಲ್ಲವು. ಅಂತಹ ಅತಿರಂಜಿತ ಬರಹಗಳನ್ನು(ಉದಾಹರಣೆಗೆ:ಥಾಮಸ್ ಮಿಜಲೇ: Jr . Thomas Midgley) ಓದಿದ ಓದುಗರು ‘ವಿಜ್ಞಾನ ಹಾಗೂ ತಂತ್ರಜ್ಞಾನಗಳು’ ಮನುಕುಲಕ್ಕೆ ಮಾರಕ ಎಂದು ಸಾರಾ ಸಗಟಾಗಿ ಭಾವಿಸುವ ಅಪಾಯವಿದೆ.
೮) ವಿಜ್ಞಾನ ಲೇಖನವನ್ನು ಪ್ರಕಟಿಸುವ ಸಂಪಾದಕರಿಗೂ ಅಂತಹ ಜ್ಞಾನ ಹಾಗೂ ಕೌಶಲ ಅಗತ್ಯ. ಸೆಕೆಂಡ್ ಹಾರ್ಮೋನಿಕ್ ಜನರೇಶನ್ (ಒಂದು ಆವರ್ತನದ ಬೆಳಕನ್ನು ಒಂದು ವಿಶೇಷ ಸ್ಫಟಿಕದ ಮೂಲಕ ಹಾಯಿಸಿದರೆ ಆ ಬೆಳಕಿನ ಆವರ್ತನ /ಫ್ರೀಕ್ವೆನ್ಸಿ ದ್ವಿಗುಣ ಗೊಳ್ಳುವುದು!) ಕಂಡು ಹಿಡಿದ ವಿಜ್ಞಾನಿಗಳು ಅದನ್ನು ಒಂದು ಭೌತಶಾಸ್ತ್ರದ ನಿಯತಕಾಲಿಕಕ್ಕೆ ಕಳುಹಿಸಿದ್ದರು. ವಿಷಯವನ್ನು ಅರ್ಥೈಸಿಕೊಳ್ಳದ ಎಡಿಟರ್ ಆ ಚುಕ್ಕಿ-ಸದೃಶ ಡೇಟಾ ಅನ್ನು ‘ಏನೋ ಡಸ್ಟ್ ಬಿದ್ದು ಹಾಗಾಗಿರಬಹುದು’ ಎಂದು ಅಳಿಸಿ ಹಾಕಿ ಉಳಿದದ್ದನ್ನು ಪ್ರಕಟಿಸಿದ್ದ! ಹಾಗೆ ಸಂಶೋಧನೆಯ ಮುಖ್ಯ ಅಂಗವೇ ಪ್ರಕಟಣೆಯಿಂದ ಮಾಯವಾಗಿತ್ತು!
– ಕೃಪೆ
ವಿನ್ನಡ.ಇನ್